ಮಳೆಗಾಲದ ವರ್ಷಧಾರೆ ಪ್ರಾರಂಭವಾಯಿತೋ, ನೆಲದಿಂದ ಮೇಲೆದ್ದು ಬರುವ ಹತ್ತು ಹಲವು ಸಸ್ಯರಾಶಿ. ಅವುಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ ತಗತೆ ಗಿಡ ಅಥವಾ ತಾಂತ್ರಿಕ ಸೊಪ್ಪು. == ಸೊಪ್ಪಿನ ಕುರಿತು == ಇದು ಹೆಚ್ಚಾಗಿ ಮಳೆಗಾಲದಲ್ಲಿ ಆಗುವ ಗಿಡವಾಗಿದ್ದು, ಔಷಧಿಯ ಗುಣಗಳನ್ನು ಹೊಂದಿದ್ದು ಆಯುರ್ವೇದದಲ್ಲಿ ಹೆಚ್ಚು ಬಳಕೆಯಲ್ಲಿದೆ. ತಜಂಕ್ (ತಗತೆ/ತಗಚೆ/ತಗಟೆ) ಗಿಡದ ಚಿಗುರು ಪ್ರಯೋಜನಕಾರಿಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಈ ಗಿಡವು ಸರ್ವೆ ಸಾಮಾನ್ಯವಾಗಿ ಕಾಣಸಿಗುತ್ತದೆ. == ಔಷಧೀಯ ಗುಣ == ತಜಂಕ್ ಆರ್ಯುವೇದದಲ್ಲಿಯ ವಿಶಿಷ್ಟ ಸ್ಥಾನವನ್ನು ಪಡೆದಿದೆ. ತಜಂಕ್ ನ ಒಣಬೀಜವನ್ನು ತೆಗೆದುಕೊಂಡು ಪುಡಿಮಾಡಿ ಅದರಿಂದ ಕಾಫಿಯನ್ನು ಮಾಡುತ್ತಾರೆ. ಇದು ದೇಹಕ್ಕೆ ತಂಪು ನೀಡುತ್ತದೆ. ಗಾಯಕ್ಕೆ ಇದರ ರಸವನ್ನು ಹಚ್ಚಿದರೆ ಉರಿ ಕಡಿಮೆಯಾಗುತ್ತದೆ. ರಕ್ತವನ್ನು ಶುಧ್ಧೀಕರಿಸುವ ಗುಣವನ್ನು ಹೊಂದಿರುವ ತಜಂಕ್ ಕಿಬ್ಬೊಟ್ಟೆ ನೋವು, ಉರಿಯೂತ, ಮಲಬಧ್ಧತೆ, ಬೊಜ್ಜು ಕರಗಿಸುವಲ್ಲಿಯು ಪರಿಣಾಮಕಾರಿಯಾಗಿದೆ. ತಗತೆ ಸೊಪ್ಪನ್ನು ಚರ್ಮದ ರೋಗಗಳಾದ ಉಗುರು ಸುತ್ತು, ತುರಿಕೆ, ಗಾಯ ಈ ಜಾಗಗಳಿಗೆ ಸೊಪ್ಪನ್ನು ಅರೆದು ಹಚ್ಚಿದರೆ ಒಳ್ಳೆಯದು. ಅಲ್ಲದೆ ಆಹಾರದಲ್ಲಿ ಬಳಸಿದರೆ ಇನ್ನೂ ಒಳ್ಳೆಯದು. ಆಯುರ್ವೇದದ ಪ್ರಕಾರ ತಗತೆ ಸೊಪ್ಪು ದೇಹದಲ್ಲಿನ ವಾತ ಮತ್ತು ಕಫ ದೋಷ ವನ್ನು ತೆಗೆದುಹಾಕುತ್ತದೆ.ತಗತೆ ಸೊಪ್ಪನ್ನು ನೀರಲ್ಲಿ ಕುದಿಸಿ ಕುಡಿಸಿದರೆ ಬಂದ ಜ್ವರ ವಾಸಿಯಾಗುತ್ತದೆ. ಅಲ್ಲದೆ ಎಲೆಯ ರಸವನ್ನು ಕೆಮ್ಮು ಇದ್ದಾಗ ಕುಡಿದರೆ ಕೂಡಲೇ ಕೆಮ್ಮು ಕಡಿಮೆಯಾಗುತ್ತದೆ. ಬ್ಯಾಕ್ಟೀರಿಯಾದಿಂದ ಚರ್ಮದಲ್ಲಾದ ಸೋಂಕಿಗೆ ತಗತೆ ಎಲೆಯನ್ನು ಅರೆದು ಹಚ್ಚಿದರೆ ಉತ್ತಮ ಪರಿಣಾಮ ನೀಡುತ್ತದೆ. ತಗತೆ ಸೊಪ್ಪಿನ ಬಳಕೆಯಿಂದ ಮೂಲವ್ಯಾದಿಯು ಕಡಿಮೆಯಾಗುತ್ತದೆ. ಅಜೀರ್ಣವಾಗಿದ್ದರೆ ಅಥವಾ ಹಸಿವಾಗದಿದ್ದರೆ ತಗತೆ ಸೊಪ್ಪಿನ ಬಳಕೆಯಿಂದ ಉತ್ತಮ ಪರಿಣಾಮ ಬೀರುತ್ತದೆ. ಋತುಚಕ್ರದಲ್ಲಿ ಸಮಸ್ಯೆಗಳಾಗಿದ್ದಲ್ಲಿ ತಗತೆ ಗಿಡವನ್ನು ನೀರಲ್ಲಿ ಕುದಿಸಿ ಶೋಧಿಸಿ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ನಿಂಬೆರಸದೊಂದಿಗೆ ಇದರ ಬೇರನ್ನು ಅರೆದು ಚರ್ಮವ್ಯಾಧಿಗೆ ಲೇಪ ಹಾಕುವ ಪಧ್ಧತಿ ಇದೆ. ಸೊಪ್ಪಿನ ಕಷಾಯ ಅಜೀರ್ಣಕ್ಕೆ ಉತ್ತಮ ಹಳ್ಳಿಮದ್ದು. ಸೊಪ್ಪನ್ನು ಅರೆದು ತುರಿಕಜ್ಜಿ, ರಿಂಗ್ವರ್ಮ್ ಇತ್ಯಾದಿ ಚರ್ಮರೋಗಗಳಿಗೆ ಔಷಧಿಯಾಗಿ ಬಳಸುತ್ತಾರೆ. ಇನ್ನೊಂದು ಮಾಹಿತಿಯ ಪ್ರಕಾರ, ಉಪಯೋಗ - ರಕ್ತಬೇದಿಗೆ, ತುರಿಕಜ್ಜಿಗೆ, ಜ್ವರಕ್ಕೆ, ದದ್ದಿಗೆ, ಜೇನು ಚೇಳು ಕಡಿತಕ್ಕೆ. ಇದು ಕಳೆಗಿಡವೇ ಆಗಿದ್ದರೂ ಬೇರು, ಎಲೆ, ಕಾಯಿಗಳೆಲ್ಲ ಉಪಯುಕ್ತವಾಗಿವೆ. ಚೆನ್ನಾಗಿ ಬಲಿತ ಗಿಡದ ಕಾಂಡವನ್ನು ತುಂಡರಸಿ ಚಿಕ್ಕ ಚಿಕ್ಕ ತುಂಡುಗಳನ್ನು ಒಣಗಿಸಿ. ಬೇಕಾದಾಗ ಕಷಾಯ ತಯಾರಿಸಿ. ಇದು ದಾಲ್ಚೀನಿಯಂತೆ ಸುಗಧಭರಿತವಾಗಿರುವುದು. ಅಡುಗೆಯ ಖಾದ್ಯಗಳ ರುಚಿ ಹಾಗೂ ಗುಣಗಳನ್ನು ಅಧಿಕಗೊಳಿಸುವುದು. == ತಯಾರಿಸುವ ಖಾದ್ಯಗಳು == ಆಷಾಢಮಾಸದಲ್ಲಿ ಇದನ್ನು ಅಡುಗೆ ಮಾಡಿ ತಿನ್ನಬೇಕೆಂಬ ಸಂಪ್ರದಾಯವೂ ತುಳು ಜನಾಂಗದವರಲ್ಲಿದೆ . ತುಳು ಭಾಷೆಯಲ್ಲಿ ಇದು ತಜಂಕ್ ಎಂದೇ ಜನಪ್ರಿಯವಾಗಿದೆ. ವಿವಿಧ ರೀತಿಯ ಖಾದ್ಯಗಳಲ್ಲಿ ತಜಂಕ್ ಪತ್ರೋಡೆ, ತಜಂಕ್ ನೀರ್‌ದೋಸೆ, ತಜಂಕ್ ವಡೆ, ತಜಂಕ್ ಸುಕ್ಕ, ಸಾರು ಹೀಗೆ ವಿಭಿನ್ನ ರೀತಿಯಲ್ಲಿ ತಜಂಕ್ ಅನ್ನು ಆಹಾರ ಕ್ರಮದಲ್ಲಿ ಬಳಸಲಾಗುತ್ತದೆ. ರುಚಿಕರ ಆಹಾರದ ಜೊತೆಗೆ ಆರೋಗ್ಯ ರಕ್ಷಣೆ ಮಾಡುವ ತಗತೆ ಸೊಪ್ಪಿನ ಬಳಕೆ ಮಾಡುವುದು ಒಳ್ಳೆಯದು. == ನೈಸರ್ಗಿಕ ಕೀಟನಾಶಕ == ಬೀಜದಲ್ಲಿ ಪ್ರೊಟೀನ್ ಅಧಿಕ, ಪಕ್ಷಿಗಳ ಪ್ರಿಯ ಆಹಾರ. ಸಾವಯವ ಕೃಷಿಕರ ಅಚ್ಚುಮೆಚ್ಚಿನ ಸಸ್ಯ .ಮರಗಿಡಗಳಿಗೆ ಉತ್ತಮ ಹಸಿರೆಲೆ ಗೊಬ್ಬರ. ಜೊತೆಗೆ ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸುವುದು. ಅಡಿಕೆ ತೋಟಗಳ ಮಣ್ಣಿನ ಆಮ್ಲೀಯತೆ ಹೆಚ್ಚಾದಲ್ಲಿ ಇಳುವರಿ ಕಡಿಮೆಯಾಗುವುದು. ಅಂಥ ಸಂದರ್ಭದಲ್ಲಿ ಮರಗಳ ಬುಡಕ್ಕೆ ತಗತೇಸೊಪ್ಪನ್ನು ತುಂಡರಿಸಿ ಹಾಕಿದಲ್ಲಿ ತೋಟ ನಳನಳಿಸುವುದು. " ತಗತೆ ಸಸ್ಯ ಸಂಕುಲವನ್ನು ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಪಾರ್ಥೇನಿಯಂ ಕಳೆ ತೊಲಗಬಹುದು " - ಇದು ಸಸ್ಯ ವಿಜ್ಞಾನಿಗಳ ಅಭಿಮತ. == ಉಲ್ಲೇಖಗಳು ==